Sunday, 2 October 2016

ಭರವಸೆಯೇ ಬೆಳಕು..


ಬದುಕಿನ ರಂಗಭೂಮಿಯಲಿ
ಮುಖವಾಡ ಅನಿವಾರ‍್ಯ...
ನಿನ್ನ ಪಾತ್ರ ಮುಗಿಯುವರೆಗೆ ಮಾತ್ರ...
ಮುಖವಾಡವೇ ಮುಖವಾದರೆ 
ನಿಜ ಪಾತ್ರದಾರಿ ಮರೆಯಾಗುವನು..
ಸೂತ್ರದಾರಿಯೇ ಗುರುವಾಗುವನು..

ಕರಗುವ ಚಂದಿರ ಪೂರ್ಣನಾಗುವನು
ಅಮವಾಸ್ಯೆ ಕಳೆದು ಹುಣ್ಣಿಮೆಯಲಿ...
ಆದರೆ ಕರಗಿದ ಮನಸ್ಸು ದೃಢವಾಗುವುದೇ
ಬೆರಳೆಣಿಕೆಯ ದಿನಗಳಲಿ..
ಅಂದದ ಮನಸ್ಸಿಗಿಂತ ಆಭರಣವಿಲ್ಲ...
ಆದರೆ ನೀ ಆಭರಣದಂಗಡಿಯ ಮಾಲಿಕನಲ್ಲ
ಪ್ರತಿ ಬಾರಿ ಹೊಸದು ಕೊಳ್ಳಲಿಕ್ಕೆ....
ಆಭರಣವ ಜೋಪಾನವಿರಿಸು..
ಪ್ರೀತಿಯಿಂದ ಕೊಳ್ಳುವವರು ಸಿಕ್ಕಾರು...

ಸ್ನೇಹಿತರು,ಕುಲದವರು,ನಿನ್ನೂರಿನ ಕಡೆಯವರು
ಎಲ್ಲರೂ ಜೊತೆಗಿರುವರು ಬೆಳದಿಂಗಳೂಟಕೆ..
ನಿನ್ನಿಂದಾಗುವ ಕೆಲಸಕೆ...
ಬಾರದೆ ಇರಲು ಕಾರಣ ಕೊಡುವರು
ನಿನ್ನ ಕತ್ತಲ ಕೂಟಕೆ,
ನಿನ್ನ ನೋವಿನ ಮಂಟಪಕೆ ...
ನಿನಗೆ ತಿಳಿದಿರಲಿ ನೀ ಯಾರಿಗೂ ಕಡಿಮೆ ಏನಿಲ್ಲ
ಪ್ರತೀ ಬಾರಿ ಸೋತಾಗಲೂ ಎದ್ದು ನಿಲ್ಲಲ್ಲಿಕ್ಕೆ...
ಬದುಕ ವ್ಯಯಿಸಬೇಡ ಈ ಕ್ಷಣದ ಸುಖಕಾಗಿ
ಬದುಕು ನೀ ನಿನ್ನ ಬದುಕಿಸಿದ ತಾಯಿಗಾಗಿ..
ಬದುಕು ನೀ ನಿನ್ನ ಬೆಳೆಸಿದ ತಂದೆಗಾಗಿ..
ಬದುಕು ನೀ ನಿನ್ನ ರೂಪಿಸಿದ ಗುರುವಿಗಾಗಿ..


ಸತ್ಯಕ್ಕೆ ಸೋಲಿಲ್ಲ
ಸುಳ್ಳಿಗೆ ಜಯವಿಲ್ಲ
ಅವಕಾಶಕೆ ಕೊನೆಯಿಲ್ಲ
ಅಪವಾದವೇ ಕೊನೆಯಲ್ಲ
ಗೆಲುವೇ ಶಾಶ್ವತವಲ್ಲ
ಸೋಲೇ ಸಮಾಧಿಯಲ್ಲ
ಇದನ್ನರಿತರೆ ನೀ ಜಗತ್ತಿನಲ್ಲಿ
ಇಲ್ಲದಿದ್ದರೆ ಜಗತ್ತು ಇನ್ನೆಲ್ಲಿ..?

Thursday, 11 August 2016

ಬಾನಂಗೋಚಿ..


ಬಾನಿಗೊಮ್ಮೆ ಹಾರುವಾಸೆ 
ಬಾನಂಗೋಚಿಯಾಗುವಾಸೆ
ಮೋಡದೊಡನೆ ತೇಲಿ ತೇಲಿ
ಮನದ ನೋವ ಮರೆಯುವಾಸೆ..

ಮೇಲೆ ಹೋಗಿ ಹಗುರವಾಗಿ
ತನ್ನ ತನವ ಕಾಣುವಾಸೆ
ಸೂರ್ಯ ಚಂದ್ರ ತಾರೆಯೊಡನೆ
ಸ್ನೇಹಸೌಧ ಕಟ್ಟುವಾಸೆ..

ಮೇಲೆ ಹೋಗಿ ಇಣುಕಿ ನೋಡಿ
ಕಣ್ಣಾಮುಚ್ಚೆಯಾಡುವಾಸೆ..
ಮಗುವಿನಂತೆ ಮುಗ್ಧವಾಗಿ
ಬಾನ ತೊಟ್ಟಿಲಲಿ ಮಲಗುವಾಸೆ..

ಕೊನೆಯೇ ಇರದ ಬಾನಿನಲ್ಲಿ
ಗೆಜ್ಜೆ ಕಟ್ಟಿ ಕುಣಿಯುವಾಸೆ
ಯಾರೂ ಇರದ ಊರಿನಲ್ಲಿ
ನಾನೇ ನನ್ನ ಹುಡುಕುವಾಸೆ..

ಬಾನಾಡಿ ಜೊತೆ ಸೇರಿ
ಸ್ವತಂತ್ರವಾಗಿ ಹಾರುವಾಸೆ
ಬಾನಲಿರುವ ಸ್ವಚ್ಚಂದ ಪ್ರೀತಿಯಾ
ಭೂಮಿಗೂ ತರುವ ಆಸೆ...






Saturday, 6 August 2016

ವಿರಹಿ...!



ಕಾಡುವ ಪದಗಳ ಲೋಕಕೆ
ನೀನೇ ಮಾಲಿಕನು..
ತೇಲುವ ತೆರೆಗಳ ಕಡಲಿಗೆ
ನೀನೇ ಯಾತ್ರಿಕನು..
ಏನೇ ಹಾಡಿದರೂ ನಾನೇನೇ ಗೀಚಿದರೂ
ನಿನ್ನ ನೆನಪೇ ನನ್ನನ್ನು ಸಂಮೋಹಿಸುತಿದೆ



ಸಾಕಾಯ್ತು ನಂಗಂತೂ ಮಾತುಕತೆ
ಆಲಿಸುವೆ ನಿನ್ನ ಕವಿತೆ..
ಜೋರಾಯ್ತು ನನ್ನಲ್ಲಿ ಮೂಕವ್ಯಥೆ
ಊಹಿಸಲು ನಿನ್ನ ಕುರಿತೇ..
ಮುಗಿಯದ ಭಾವದ ಬಳುವಳಿಗೆ
ಮರುಗಿದೆ ನನ್ನ ಮನ



ನೀ ಆಡಿದ ಎಲ್ಲಾ ಮಾತಿಗೂ ಕೂಡ
ನನ್ನ ಭಾವವೂ ನಿಗೂಢ..
ನೀ ಕಾಡಿದ ಎಲ್ಲಾ ಕನಸಲೂ ಕೂಡ
ನನ್ನ ಕಲ್ಪನೆ ಅಗಾಧ..
ಚುರುಕಿನ ಪ್ರೀತಿಯ ಚಳುವಳಿಗೆ
ಕರಗಿದೆ ನನ್ನ ಮನ

Saturday, 12 March 2016

ಹಾಗೆ ಸುಮ್ಮನೆ..!!

ಈ ಕಾಲವೇ ಹೀಗೆ..ಅದು ಬದಲಾದಂತೆ ನಮನ್ನು ಬದಲಿಸುತ್ತದೆ.ಅದರ ಓಟಕ್ಕೆ ತಕ್ಕಂತೆ ನಮ್ಮನ್ನೂಓಡಿಸುತ್ತದೆ.ಎಂದೋ ಮಾಡಿದ ಜಗಳ ಇಂದು ಕ್ಷುಲ್ಲಕವೆನಿಸುತ್ತದೆ.ಎಂದೋ ಹಾಡಿದ ಹಾಡು ಇಂದು ಅರ್ಥಪೂರ್ಣ ಎನಿಸುತ್ತದೆ.ಎಂದೋ ಮಾಡಿದ ಕೆಲಸ ಇಂದು ಫಲ ಕೊಡುತ್ತಿದೆ ಎನಿಸುತ್ತದೆ.ಯಾರೋ ಮಾಡಿದ ನೋವು ಮತ್ತೆ ಮತ್ತೆ ಕಾಡುತ್ತದೆ.ಇನ್ಯಾರನ್ನೋ ಜೀವ ಹೆಚ್ಚು ಹೆಚ್ಚು ನೆನಪಿಸಿಕೊಳ್ಳುತ್ತದೆ.

ಜೀವಕ್ಕೆ ಜೀವವಾಗಿದ್ದ ಗೆಳತಿ,ಗೆಳೆಯರು ಯಾವುದೋ ನೆಪವೊಡ್ಡಿ ದೂರಾಗುತ್ತಾರೆ.ನಿನ್ನೆಯ ವರೆಗಿನ ಸತ್ಯ  ಇಂದು ಸುಳ್ಳೆಂದು ಗೊತ್ತಾದ ಬಳಿಕ ಸತ್ಯ-ಸುಳ್ಳುಗಳ ನಡುವಿನ ಅಂತರದ ಹುಡುಕಾಟ ಶುರುವಾಗುತ್ತದೆ.ಇಂದಿನ ಖುಷಿಯನ್ನು ನಾಳೆಯ ಭಯ ಮುಚ್ಚಿ ಹಾಕುತ್ತದೆ.


ಪ್ರತಿ ಕ್ಷಣ ಬದುಕಿನ ದಾರಿಯ ಬದಲಿಸುವ ಹಂಬಲದಲ್ಲಿರುತ್ತೇವೆ.ಇನ್ನೊಬ್ಬರ ಬದುಕಲ್ಲಿ ನಾವು ಕಾಣದ  ಏನೋ ಸಂತೋಷವಿದೆ ಎಂದು ನಂಬುತ್ತೇವೆ.ಅವರ ಬದುಕಲ್ಲಿ ನಾವು ಕಾಣದ ನೋವು ಕೂಡ ಇದೆ ಎಂಬುದು ಮರೆಯುತ್ತೇವೆ.ಇನ್ನೊಬ್ಬರ ಮೆಚ್ಚಿಸುವ ತವಕದಲ್ಲಿ ನಮ್ಮ ಮೆಚ್ಚುಗೆ ಯಾವುದಾಗಿತ್ತೆಂಬುದೇ ಮರೆಯುತ್ತೇವೆ

ಕಣ್ಣಿನ ನೋಟ,ಕಿವಿಗಳ  ಆಲಿಸುವಿಕೆ ಎಲ್ಲವೂ ಭಾಲಿಶವಾಗ ತೊಡಗಿವೆ.ಒಳಾರ್ಥಗಳ ಅರಿಯುವ ಸಹನೆ ಇಲ್ಲವಾಗಿದೆ.ಭಾವನೆಯ ಬೆಲೆಯನ್ನು ಹಣದ ಬೆಲೆಯಿಂದ ಕೊಳ್ಳುತ್ತೇವೆ.ದೊಡ್ಡ ಸಂತೋಷಗಳ ನಡುವೆ ಚಿಕ್ಕ ಖುಷಿಗಳು ಕಾಣದಾಗಿವೆ.ಪಬ್ಬು-ಪಾರ್ಟಿಗಳ ನಡುವೆ ಹಬ್ಬ-ಹರಿದಿನಗಳ ಸಡಗರ ಮರೆಯಾಗಿದೆ

ಕಾಂಕ್ರೀಟು ಗೋರಿಗಳ ನಡುವೆ ನಿಸರ್ಗದ ನಿರುಮ್ಮಳ ನಗೆ ಅಡಗಿ ಹೋಗಿದೆ.ರೆಡಿಮೇಡು ಖಾದ್ಯಗಳ ವಾಸನೆಯ ನಡುವೆ ದೇವರಿಗಿಟ್ಟ ಮಲ್ಲಿಗೆಯ ಘಮ ಮಾಯವಾಗಿದೆ.ಜೀನ್ಸು-ಟಾಪುಗಳ ಹಾವಳಿಗೆ ದಾವಣಿ-ಸೆರಗುಗಳು ಬದಿಗೋಗಿವೆ.ಟೀವಿ-ಸೀರೇಲುಗಳ ಪ್ರಭಾವಕ್ಕೆ ಆಡುವ ಮಾತಿನ ತೂಕ ಕಡಿಮೆಯಾಗಿದೆ.

ಆಡುವ ಕೈಲಿ ಬೇಡದ ಮೊಬೈಲು ಬಂದಿದೆ.ಪುಸ್ತಕದ ಬದಲು ಇಂಟರ್ನೆಟ್ ಬಂದಿದೆ.ಮಾನವ ಯುಗದಿಂದ  ಯಾಂತ್ರಿಕ ಯುಗಕ್ಕೆ ಬದಲಾಗುತ್ತಿದೆ.ಚಂದಿರ ತುತ್ತು ತಿನಿಸಲು ಮಾತ್ರ ಅಲ್ಲ ಚಂದಿರನಲ್ಲಿಗೆ ಹೋಗಿ ಬರಲು ಸಾಧ್ಯ ಎಂದು ತಿಳಿದಿದ್ದೇವೆ.ಕ್ಷಣಾರ್ದದಲ್ಲಿ ಜಗತ್ತನ್ನೇ ಕೊಳ್ಳುವ ದುಸ್ಸಾಹಸದಲ್ಲಿದ್ದೇವೆ.ಯೋಚನಾ ಲಹರಿಗಳ ಬದಿಗೊತ್ತಿ ಅವಸರದ ಬದುಕು ಕಟ್ಟಿಕೊಂಡಿದ್ದೇವೆ.


ಕಾಲದ ಜೊತೆ ಸೆಣಸಾಡಿ ಏನನ್ನೋ ಗೆಲ್ಲುವ ತವಕದಲ್ಲಿ ಎಲ್ಲವನ್ನು ಮರೆತಿದ್ದೇವೆ..ಹೆತ್ತ ತಾಯಿಯನನ್ನೂ ಕೂಡ...!!!ಇಂತಹ ಅರ್ಥಹೀನ ಬದುಕನ್ನು ಸಾವಿರ ವರ್ಷ ಬದುಕುವುದಕ್ಕಿಂತ
ಭಾವಪೂರ್ಣವಾಗಿ ಒಂದು ದಿನ ಬದುಕಿದರೂ ಸಾಕಲ್ಲವೇ..?