Thursday, 26 November 2015

ಹೃದಯದ ಮಾತು....!!

(ಮಾತಿನಲ್ಲಿ ಹೇಳಲಾರೆನು.. ಗೀತೆಯ ರಾಗಕ್ಕೆ ಅನುಗುಣವಾಗುವಂತೆ)



















ಕನಸಲೊಂದು ಕನಸು ಮೂಡಿದೆ
ಮನಸು ಒಂದು ಸುಳ್ಳು ಹೇಳಿದೆ
ಆದರೂನು ನಂಬಿ ನಕ್ಕ ಹುಚ್ಚು ಮೂರ್ಖ ನಾ
ಅಂತ ಸಂಗತಿ... ನಿನ್ನ ಅನುಮತಿ
ಮುಗಿದು ಹೋಯಿತೇ ನನ್ನ ಗ್ರಹಗತಿ..
ನಾನು ಹಾರಿ ಹೋದೆ ನನ್ನ ಬಿಟ್ಟು ದೂರ ದೂರಕಿಂದು
ಅಂತ ಸಾಹಸ.. ಹುಚ್ಚು ಸಂತಸ
ಕೊನೆಯೇ ಕಾಣದ ಸ್ವಪ್ನ ಸಾಗರ


ಒಲವಲ್ಲಿದೆ ಈ ಒಲವಲ್ಲಿದೆ, ಮರೆಯಾಗದ ಹೊಸ ಆಕರ್ಷಣೆ
ನಿನ್ನಲ್ಲಿದೆ ಆಹಾ ನಿನ್ನಲ್ಲಿದೆ, ಮನ ಕದಿಯುವ ತುಂಟ ಸಂಭಾಷಣೆ
ಬಲೆಯಲಿರುವ ಮೀನು ನಾನು, ನನ್ನ ಜೀವಧಾರೆ ನೀನು
ನಿನ್ನ ಬಿಟ್ಟು ನಾನು ಇನ್ನು ಬಾಳಲಾರೆನು
ಮನದ ಮಳಿಗೆಯಲ್ಲಿ ಬಂದು ಹೋದಂತ ಚೋರಿ ನೀನು
ನನ್ನ ಉಸಿರಲಿ...ನಿನ್ನ ಹೆಸರಿದೆ
ಏಕೆ ಉಳಿಸಿದೆ ನೀ ನನ್ನ ಕೊಲ್ಲದೆ


ಕಣ್ಣಲ್ಲಿದೆ ಆ ಕಣ್ಣಲ್ಲಿದೆ, ಕೊನೆ ಕಾಣದ ಆ ಸಿಹಿಸ್ವಾಗತ
ಅರಿವಿಲ್ಲದೆ ಮನ ಅನುಭವಿಸಿದೆ ,ನೀನಿಲ್ಲದ ಸಿಹಿ ಸಂಕಟ
ಮನದ ಮಾತು ಕೇಳದೇನೆ, ಸರಿಯೋ ತಪ್ಪೋ ತಿಳಿಯದೇನೇ
ಹೃದಯವನ್ನು ಕೈಲಿ ಹಿಡಿದು ಬಳಿಗೆ ಬಂದೆನು
ನೀನೇ ಇಲ್ಲದೇನೆ ಈ ಜೀವ ನನ್ನ ಬಿಟ್ಟು ಹೋಗಿ
ಇಲ್ಲವಾದೆ ನಾ..ಇನ್ನು ಬಾರೆಯಾ..
ನನ್ನ ಜೀವಕೆ ಉಸಿರು ನೀಡೆಯಾ..

ಬಾಲ್ಯದಲ್ಲೇ ಕನ್ನಡ-ನುಡಿ ನಮನ



ಪ್ರಾಚೀನ  ಭಾಷೆಗಳಲ್ಲಿ ಒಂದಾದ ಕನ್ನಡ ಇಂದು ಕರ್ನಾಟಕಕ್ಕೆ ಮಾತ್ರ ಅದರಲ್ಲೂ ಹಳ್ಳಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕನ್ನಡಿಗರಲ್ಲದೇ ಇನ್ನಾರು ಕಾರಣ..."ಕನ್ನಡ ಎಂದರೆ ಕಿವಿ ನಿಮಿರುವುದು" ಎಂಬ ಕುವೆಂಪು ರವರ ಸಾಲು ಇಂದು ಬೇರೆಯದೇ ರೀತಿಯಲ್ಲಿ ಸತ್ಯವೆನಿಸಿದೆ.ಸುತ್ತಲೂ ಕಿವಿಗೆ ಬೀಳುವ ಹತ್ತಾರು ಭಾಷೆಗಳ ಮಧ್ಯದಲ್ಲಿ ಒಂದು ಕನ್ನಡ ಪದ ಕಿವಿಗೆ ಬಿದ್ದರೆ ಕಿವಿ ನಿಮಿರುವುದರಲ್ಲಿ ಸಂದೇಹವಿಲ್ಲ.

ಬಾಲ್ಯದಲ್ಲಿಯೇ ,,, ತಿದ್ದಿಸಿ,"ಒಂದು ಎರಡು ಬಾಳಲೆ ಹರಡು" ಪದ್ಯಗಳನ್ನು ಕಲಿಸುತ್ತಾ ಮಕ್ಕಳನ್ನು ಬೆಳೆಸಬೇಕಿದ್ದ ಪಾಲಕರು,ಇಂದು ತಾವು ದುಡಿದ ಹಣವನ್ನೆಲ್ಲಾ ಕಟ್ಟಿ ಮಕ್ಕಳನ್ನು ಆಂಗ್ಲ ಶಾಲೆಗಳಿಗೆ ಸೇರಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆಆಂಗ್ಲ ಶಾಲೆಗಳು ಇರುವುದು ಕರ್ನಾಟಕದಲ್ಲಾದರೂ ಅಲ್ಲಿ ಮೊಟ್ಟಮೊದಲು ಕಲಿಸುವುದು ಆಂಗ್ಲ ಭಾಷೆಯನ್ನು.ಒಂದನೇ ತರಗತಿಗೆ ಕಾಲಿಟ್ಟ ಮಗು ಆಂಗ್ಲ ಭಾಷೆಯಲ್ಲಿ ವಾಕ್ಯ ಮಾಡಿ ಬಳಸುವುದನ್ನೇ ಕಲಿತಿರುತ್ತದೆ ಆದರೆ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಗುರುತಿಸಲೂ ಕಷ್ಟ ಪಡುತ್ತದೆ. ಸರಾಗವಾಗಿ ಆಂಗ್ಲ ಭಾಷೆ ಕಲಿತಿರುವ ಮಗು ಕ್ಲಿಷ್ಟವಾದ ರಚನೆ ಒಳಗೊಂಡ ವರ್ಣಮಾಲೆಯನ್ನು ಕಲಿಯಲು ಪರದಾಡಬೇಕಾಗುತ್ತದೆ.ಆಗಲೇ ಕನ್ನಡ ಕಷ್ಟ ಎಂಬ ಭಾವನೆ ಮಗುವಿನ ಮನಸ್ಸಲ್ಲಿ ಮೂಡುತ್ತದೆ. "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ನಾಣ್ಣುಡಿಯಂತೆ ಬಾಲ್ಯದಲ್ಲಿ ನಾವು ಕನ್ನಡ ಕಲಿಸದಿದ್ದರೆ ಮುಂದೊಂದು ದಿನ ಅವರಿಗೆ ಕನ್ನಡ ಬರುವುದಿಲ್ಲ ಎಂದು ಆಪಾದಿಸುವ ಅರ್ಹತೆ ನಮಗಿರುವುದಿಲ್ಲ.ಪಾಲಕರು ದಯವಿಟ್ಟು ಇದನ್ನರಿತು ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಬೆಳೆಸಬೇಕು.ಕನ್ನಡದ ಸೌಂದರ್ಯವನ್ನು ತಿಳಿ ಹೇಳಬೇಕು.ಆಂಗ್ಲ ಭಾಷೆಯಲ್ಲಿ ಬೇರೆ ಬೇರೆ ವರ್ಣವೂ ಸಹ ಕೆಲವೊಮ್ಮೆ ಒಂದೇ ಉಚ್ಚಾರವನ್ನು ನೀಡುತ್ತದೆ.ಆದರೆ ನಮ್ಮ ಕನ್ನಡ ಹಾಗಲ್ಲ.ಒಂದು ವರ್ಣ ಒಂದೇ ಉಚ್ಚಾರ.ಅದು ಎಂದಿಗೂ ಬದಲಾಗುವುದಿಲ್ಲ.


ಬಾಲ್ಯದಲ್ಲಿಯೇ ಮಕ್ಕಳಿಗೆ ಕನ್ನಡ ಕಲಿಸಿ,ಕನ್ನಡ ಪ್ರೀತಿಯನ್ನು ಬೆಳೆಸಿದಲ್ಲಿ ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯುವುದು ಸುಲಭವಾಗುತ್ತದೆ.ಕನ್ನಡಿಗರೇ ಆಸಕ್ತಿ ತಳೆದು ಕನ್ನಡ ಕಾರ್ಯಕ್ರಮಗಳನ್ನು,ಕನ್ನಡ ಪತ್ರಿಕೆಗಳನ್ನು,ಕನ್ನಡ ಸಿನೆಮಾಗಳನ್ನು,ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಿ ಬೆಳೆಸಿದರೆ ಮಾತ್ರ ನಮ್ಮ ಕನ್ನಡವನ್ನು ಇನ್ನೂ ಹೆಚ್ಚು ಕಾಲ ಜೀವಂತವಾಗಿರಿಸಬಹುದು.ಅನ್ಯ ಭಾಷೆ ಕಲಿಯುವುದು ತಪ್ಪಲ್ಲ.ಕಲಿತ ಮೇಲೆ ತಾಯಿ ಭಾಷೆಯನ್ನು ಮರೆಯುವುದು ತಪ್ಪು.ಅದೆಷ್ಟೇ ಭಾಷೆಗಳು ತಿಳಿದಿದ್ದರೂ ಭಾವನೆಯನ್ನು ಮನಮುಟ್ಟುವಂತೆ ಹೊರ ಹಾಕಲು ಮಾತೃಭಾಷೆಯಿಂದ ಮಾತ್ರ ಸಾಧ್ಯ.ನಮ್ಮ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕನ್ನಡವನ್ನು ಉಳಿಸಿ ಬೆಳೆಸೋಣ.ಕನ್ನಡವೇ ಸತ್ಯ.ಕನ್ನಡವೇ ನಿತ್ಯ.